ದ.ಕ.ಜಿ.ಪಂ.ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಡನ್ನೂರು ಮಕ್ಕಳಿಗಾಗಿ ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿದ್ಯಾರ್ಥಿಗಳಿಂದ ಸೃಜನಾತ್ಮಕ ಸರಣಿ ಕಾರ್ಯಕ್ರಮಗಳಗೊಂಡ ಶೈಕ್ಷಣಿಕ ಚಟುವಟಿಕಾ ಶಿಬಿರ
ಪುತ್ತೂರು: ಏ.8,ಹಿರಿಯ ಪ್ರಾಥಮಿಕ ಶಾಲೆ, ಮಾಡನ್ನೂರು ಇಲ್ಲಿ ಮಕ್ಕಳಿಗಾಗಿ ಜಾಗೃತಿ ಶಿಬಿರ ಹಾಗೂ ವಿವಿಧ ಮನರಂಜನಾ ಮತ್ತು ಸೃಜನಾತ್ಮಕ ಚಟುವಟಿಕೆಗಳನ್ನು ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಆಯೋಜಿಸಲಾಯಿತು. ಕಾರ್ಯಕ್ರಮವು ಬೆಳಿಗ್ಗೆ 10:30 ಗಂಟೆಗೆ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು.
ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಪ್ರತಿಭಾ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷರಾದ ಶ್ರೀ ಸಿ.ಕೆ ಯುಸುಫ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಮಾಡನ್ನೂರು ಶಾಲೆಯನ್ನು ಈ ಸರಣಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿರುವುದಕ್ಕೆ ಸಂತ ಫಿಲೋಮಿನಾ ಕಾಲೇಜಿಗೆ ಧನ್ಯವಾದ ಸಮರ್ಪಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ್ ಮುಖ್ಯ ಶಿಕ್ಷಕರು ಹಿರಿಯ ಪ್ರಾಥಮಿಕ ಶಾಲೆ, ಮಾಡನ್ನೂರು, ಇಂಚರ ಫೌಂಡೇಶನ್ನ ಆಪ್ತ ಸಮಾಲೋಚಕರಾದ ಶ್ರೀಮತಿ ಸೌಮ್ಯ ಕೃಷ್ಣ, ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಶೀತಲ್ ಕುಮಾರ್ ಹಾಗೂ ವಿಧ್ಯಾರ್ಥಿ ನಾಯಕ ವಿಜೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಸಿ, ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ವಿಜೇಶ್ ಸ್ವಾಗತಿಸಿ, ಚಂದನ್ ವಂದಿಸಿ, ನಿಶ್ಚಿತ್ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನೆಯ ನಂತರ ದಿನದ ಮೊದಲ ಕಾರ್ಯಕ್ರಮವಾಗಿ ಇಂಚರ ಫೌಂಡೇಶನ್ನ ಆಪ್ತ ಸಮಾಲೋಚಕರಾದ ಶ್ರೀಮತಿ ಸೌಮ್ಯ ಕೃಷ್ಣ ಅವರು ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಸುರಕ್ಷಿತ ಸ್ಪರ್ಶ (Good Touch) ಮತ್ತು ಅಸುರಕ್ಷಿತ ಸ್ಪರ್ಶ (Bad Touch) ಕುರಿತು ಮಕ್ಕಳಿಗೆ ಮಾಹಿತಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮಧ್ಯಾಹ್ನದ ನಂತರ ಅವಧಿಯಲ್ಲಿ ಮಕ್ಕಳಿಗೆ ಆರ್ಟ್ ಮತ್ತು ಕ್ರಾಫ್ಟ್ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.