ಕಲ್ಲುಗುಂಡಿಯ ಫಾತಿಮತ್ ನಿಶಾನ ಅನುಮಾನಾಸ್ಪದ ಸಾವು: ಸಂತ್ರಸ್ತ ಕುಟುಂಬಕ್ಕೆ ಶಾಸಕರ ಭರವಸೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಕಾಂಗ್ರೆಸ್ ನಿಯೋಗ ಭೇಟಿ


ಪುತ್ತೂರು : ಕುಂಬ್ರ ಸಾರಪುಣಿ ನಿವಾಸಿಗಳಾದ ಹನೀಫ್ ಹಾಗೂ ಜುಬೈದಾ ದಂಪತಿಯ ಏಕೈಕ ಪುತ್ರಿ ಫಾತಿಮತ್ ನಿಶಾನ (22) ಅವರು ಕಲ್ಲುಗುಂಡಿಯ ಅನ್ಸಾರ್ ಎಂಬವರೊಂದಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದು, ಇತ್ತೀಚೆಗೆ ಗಂಡನ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆ ಯಿಂದ ತೀವ್ರ ಸಂಕಷ್ಟಕ್ಕೆ ಈಡಾಗಿರುವ ಕುಟುಂಬದ ನಿವಾಸಕ್ಕೆ ಮಾನ್ಯ ಶಾಸಕರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರನ್ನೊಳಗೊಂಡ ವಿಶೇಷ ನಿಯೋಗವು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ಸಾಂತ್ವನ ಹೇಳಿತು.
​ಮೃತ ಫಾತಿಮತ್ ನಿಶಾನ ಅವರಿಗೆ 2.5 ವರ್ಷದ ‘ಸಿಸಾಲ್’ ಎಂಬ ಪುಟ್ಟ ಮಗುವಿದ್ದು, ಗಂಡ ಬೆಂಗಳೂರಿನಲ್ಲಿದ್ದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮರಣ ಹೊಂದುವುದಕ್ಕೆ ಕೇವಲ 30 ನಿಮಿಷಗಳ (ಅರ್ಧ ಗಂಟೆ) ಮೊದಲು ಯುವತಿಯು ತಾಯಿಗೆ ಫೋನ್ ಮಾಡಿ ಮಾತನಾಡಿದ್ದರು. ಆದರೆ, ಗಂಡ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ನಡೆದ ಈ ಘಟನೆಯ ಹಿಂದೆ ಗಂಡನ ಅತ್ತೆ, ಮಾವ ಹಾಗೂ ನಾದಿನಿಯ ನೇರ ಕೈವಾಡವಿದ್ದು, ಇವರೇ ಕೊಲೆ ಮಾಡಿದ್ದಾರೆ ಎಂಬ ಬಲವಾದ ಸಂಶಯ ವ್ಯಕ್ತವಾಗಿದೆ.

 ಘಟನೆಯ ತೀವ್ರತೆಯನ್ನು ಅರಿತ ಮಾನ್ಯ ಶಾಸಕರು ತಕ್ಷಣವೇ ಸ್ಪಂದಿಸಿ, ಕಡುಬಡತನದಲ್ಲಿರುವ ಈ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಕಾಂಗ್ರೆಸ್ ನಿಯೋಗವನ್ನು ಸ್ಥಳಕ್ಕೆ ಕಳುಹಿಸಿಕೊಟ್ಟಿದ್ದಾರೆ.
​ನಿಯೋಗದ ಭೇಟಿ ಮತ್ತು ಮುಖ್ಯ ವಿವರಗಳು:
​ಪ್ರಮುಖರ ಭೇಟಿ: ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಆಜಾದ್ ದರ್ಬೆ, ಮಹಿಳಾ ಘಟಕದ ಕಾರ್ಯದಕ್ಷರಾದ ಶ್ರೀಮತಿ ಚಂದ್ರಪ್ರಭ ಗೌಡ, ಹಿರಿಯ ಮುಖಂಡರಾದ ಇಬ್ರಾಹಿಂ ಗೋಳಿಕಟ್ಟೆ, ಶರೀಫ್ ಬಲ್ನಾಡ್, ನೌಷಾದ ಬೊಳೂವಾರ್. ಸಿನಾನ್ ದರ್ಬೆ. ಹಬೀಬ್ ಬನ್ನೂರು.ಹಾಗೂ ಇನ್ನಿತರ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

*ಶಾಸಕರ ಭೇಟಿಯ ಆಶ್ವಾಸನೆ*
ಮಾನ್ಯ ಶಾಸಕ ಅಶೋಕ್ ಕುಮಾರ್ ರೈ ಪ್ರಸ್ತುತ ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದು, ಈಗಾಗಲೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬೆಂಗಳೂರಿನಿಂದ ಆಗಮಿಸಿದ ತಕ್ಷಣವೇ ಸ್ವತಃ ಸಂತ್ರಸ್ತ ಕುಟುಂಬದ ಮನೆಗೆ ಭೇಟಿ ನೀಡಲಿದ್ದಾರೆ ಎಂದು ನಿಯೋಗವು ಕುಟುಂಬಸ್ಥರಿಗೆ ತಿಳಿಸಿದೆ.

​ಕಾನೂನು ಹೋರಾಟ ಮತ್ತು ತನಿಖೆ: ಮರಣೋತ್ತರ ಪರೀಕ್ಷೆ ವರದಿ ಬಂದ ತಕ್ಷಣ ಸಮಗ್ರ ತನಿಖೆ ನಡೆಸಿ, ಕೊಲೆಗೆ ಸಂಶಯಾಸ್ಪದವಾಗಿರುವ ಅತ್ತೆ, ಮಾವ ಮತ್ತು ನಾದಿನಿ ಸೇರಿದಂತೆ ಪ್ರಕರಣದ ಎಲ್ಲಾ ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

​ಸರ್ಕಾರಿ ಪರಿಹಾರ ಹಾಗೂ ಮಗುವಿನ ಭವಿಷ್ಯ: ಸಂಕಷ್ಟದಲ್ಲಿರುವ ತಂದೆ ಹನೀಫ್, ತಾಯಿ ಜುಬೈದಾ, ಸಹೋದರರಾದ ನಿಜಾಮು, ನವಾಜ್ ಹಾಗೂ ತಾಯಿಯನ್ನು ಕಳೆದುಕೊಂಡ 2.5 ವರ್ಷದ ಮಗು ಸಿಸಾಲ್‌ನ ಭವಿಷ್ಯಕ್ಕಾಗಿ ಸರ್ಕಾರದ ವತಿಯಿಂದ ಸಿಗಬೇಕಾದ ಎಲ್ಲಾ ರೀತಿಯ ಪರಿಹಾರ ಮತ್ತು ನೆರವನ್ನು ಶಾಸಕರ ಮೂಲಕ ಒದಗಿಸಿಕೊಡಲು ಸಂಪೂರ್ಣ ಪ್ರಯತ್ನ ಮಾಡಲಾಗುವುದು.
​ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸಂತ್ರಸ್ತ ಕುಟುಂಬದ ಜೊತೆಗೆ ಕೊನೆಯವರೆಗೆ ನಿಲ್ಲಲಿದೆ ಎಂಬ ಭರವಸೆಯನ್ನು ನೀಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Post Previous Post